ಧಾರವಾಡ: ಧಾರವಾಡ ಜಿಲ್ಲೆಯ ಅಣ್ಣಿಗೇರಿ ರೈಲ್ವೆ ನಿಲ್ದಾಣಕ್ಕೆ ಕನ್ನಡದ ಆದಿಕವಿ ಪಂಪ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಒತ್ತಾಯಿಸಿ 'ಅಕಾಡೆಮಿ ಫಾರ್ ಕ್ರಿಯೇಟಿವ್ ಲರ್ನಿಂಗ್' ಸಂಸ್ಥೆಯು ಜಿಲ್ಲಾಧಿಕಾರಿ ಸ್ನೇಹಲ್ ಅವರಿಗೆ ಮನವಿ ಸಲ್ಲಿಸಿದೆ.
ಸಂಸ್ಥೆಯು ಸಲ್ಲಿಸಿರುವ ಮನವಿಯಲ್ಲಿ, ಅಣ್ಣಿಗೇರಿಯು ಕನ್ನಡದ ಆದಿಕವಿ ಪಂಪರು ಜನಿಸಿದ ಹೆಮ್ಮೆಯ ನಾಡಾಗಿದ್ದು, ಅವರ ಸಾಹಿತ್ಯ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ಅಣ್ಣಿಗೇರಿ ರೈಲ್ವೆ ನಿಲ್ದಾಣಕ್ಕೆ 'ಆದಿಕವಿ ಪಂಪ ರೈಲ್ವೆ ನಿಲ್ದಾಣ' ಎಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಲಾಗಿದೆ.
ಇದೇ ವೇಳೆ, ಈ ಕುರಿತು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಅಗತ್ಯ ಶಿಫಾರಸು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಜೊತೆಗೆ, ಪಂಪರ ಇತಿಹಾಸ, ಸಾಹಿತ್ಯ ಸಾಧನೆ ಹಾಗೂ ಅಣ್ಣಿಗೇರಿಯೊಂದಿಗೆ ಅವರ ಸಂಬಂಧವನ್ನು ಒಳಗೊಂಡ ವಿಸ್ತೃತ ದಾಖಲೆ ಪುಸ್ತಕವನ್ನು ಅಧಿಕಾರಿಗಳಿಗೆ ಸಲ್ಲಿಸಿ, ನಾಮಕರಣ ಪ್ರಕ್ರಿಯೆಯನ್ನು ಶೀಘ್ರಗೊಳಿಸುವಂತೆ ಕೋರಲಾಗಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಅಕಾಡೆಮಿ ಅಧ್ಯಕ್ಷ ಮೊಹಮ್ಮದ್ ಸಾದಿಕ್ ಸೈಯದ್, ನಿರ್ದೇಶಕರಾದ ಶಿವಾನಂದ ಚವಡಿ, ವಿಠ್ಠಲ ರಾಮಣ್ಣವರ ಹಾಗೂ ಶಿವಾನಂದ ಕಪ್ಪತ್ತನವರ ಉಪಸ್ಥಿತರಿದ್ದರು.
ಸ್ಥಳೀಯರ ಅಭಿಪ್ರಾಯದಂತೆ, ಅಣ್ಣಿಗೇರಿಯ ಐತಿಹಾಸಿಕ ಹಾಗೂ ಸಾಹಿತ್ಯಿಕ ಮಹತ್ವವನ್ನು ದೇಶದ ಮಟ್ಟದಲ್ಲಿ ಪರಿಚಯಿಸಲು ರೈಲ್ವೆ ನಿಲ್ದಾಣಕ್ಕೆ ಆದಿಕವಿ ಪಂಪರ ಹೆಸರನ್ನು ನಾಮಕರಣ ಮಾಡುವುದು ಸೂಕ್ತ ಗೌರವವಾಗಲಿದೆ.
Post a Comment