ಧಾರವಾಡದಲ್ಲಿ ಬೆಚ್ಚಿಬೀಳಿಸಿದ ಕುಟುಂಬ ದುರಂತ: ವೈದ್ಯ ಪತಿ ಹತ್ಯೆ, ಮಗನ ಮೇಲೂ ಚಾಕು ಇರಿತ; ಆರೋಪದಡಿ ವೈದ್ಯೆ ಪತ್ನಿ ವಶಕ್ಕೆ
ಧಾರವಾಡ: ನಗರದಲ್ಲಿ ಕುಟುಂಬ ಕಲಹದ ಹಿನ್ನೆಲೆ ನಡೆದಿದೆ ಎನ್ನಲಾದ ಹೃದಯವಿದ್ರಾವಕ ಘಟನೆಯಲ್ಲಿ ವೈದ್ಯರೊಬ್ಬರು ಮೃತಪಟ್ಟಿದ್ದು, ಅವರ 8 ವರ್ಷದ ಪುತ್ರ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಧಾರವಾಡದ ಚಿರಾಯು ಆಸ್ಪತ್ರೆಯ ವೈದ್ಯ ಡಾ. ಕಿರಣ್ ಹೊನಣ್ಣವರ್ (45) ಅವರನ್ನು ಅವರ ಪತ್ನಿ ಡಾ. ಪ್ರಿಯಾಂಕಾ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ದಂಪತಿಯ 8 ವರ್ಷದ ಪುತ್ರ ನೇಹಿತ್ ಮೇಲೂ ಚಾಕುವಿನಿಂದ ಹಲ್ಲೆ ನಡೆಸಲಾಗಿದ್ದು, ಬಾಲಕ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೃತ್ಯದ ಬಳಿಕ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗುವಿನ ಸಮೀಪವೇ ಆರೋಪಿ ಮಹಿಳೆ ಮೊಬೈಲ್ ವೀಕ್ಷಿಸುತ್ತ ಕುಳಿತಿದ್ದಳು ಎಂಬ ಮಾಹಿತಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಮಾಹಿತಿ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪೊಲೀಸ್ ಆಯುಕ್ತರ ಮಾನವೀಯ ನಡೆ
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಹುಬ್ಬಳ್ಳಿ–ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಬಾಲಕನಲ್ಲಿ ಇನ್ನೂ ಜೀವಚಿಹ್ನೆಗಳಿರುವುದನ್ನು ಗಮನಿಸಿ, ಸ್ವತಃ ಮಗುವನ್ನು ಎತ್ತಿಕೊಂಡು ತುರ್ತುವಾಗಿ ಆಸ್ಪತ್ರೆಗೆ ಕಳುಹಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸಮಯೋಚಿತ ಕ್ರಮದಿಂದ ಬಾಲಕನ ಜೀವ ಉಳಿಸಲು ಸಾಧ್ಯವಾಗಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಆರೋಪಿ ವೈದ್ಯೆ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಗಂಭೀರವಾಗಿ ಗಾಯಗೊಂಡಿರುವ ಪುಟ್ಟ ನೇಹಿತ್ ಶೀಘ್ರ ಗುಣಮುಖನಾಗಲೆಂದು ಕುಟುಂಬದವರು ಹಾಗೂ ಸಾರ್ವಜನಿಕರು ಪ್ರಾರ್ಥಿಸುತ್ತಿದ್ದಾರೆ.
Post a Comment