ಮೊಹರಂ ಸಂದರ್ಭದಲ್ಲೇ ಬ್ಯಾಹಟ್ಟಿಯಲ್ಲಿ “ಕತ್ತಲ್ ರಾತ್ರಿ ಕೊಲೆ” – ಅನೈತಿಕ ಸಂಬಂಧ ಶಂಕೆಯಿಂದ ಫಕ್ಕೀರಪ್ಪನ ಹತ್ಯೆ
ಹುಬ್ಬಳ್ಳಿ: ಮೊಹರಂ ಹಬ್ಬದ ಸಂದರ್ಭದಲ್ಲೇ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಶಾಂತಿನಗರ ಪ್ಲಾಟ್ನಲ್ಲಿ ಭೀಕರ ಕೊಲೆ ನಡೆದಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಹತ್ಯೆಯಾದ ವ್ಯಕ್ತಿಯನ್ನು ಫಕ್ಕೀರಪ್ಪ ಅಲಿಯಾಸ್ ಬಸು ಅಕ್ಕಿವಳ್ಳಿ ಎಂದು ಗುರುತಿಸಲಾಗಿದೆ. ಅದೇ ಪ್ರದೇಶದ ಪ್ರಕಾಶ ಕರಶೆಟ್ಟಿ ಎಂಬಾತ ಹತ್ಯೆ ನಡೆಸಿರುವ ಆರೋಪ ಕೇಳಿಬಂದಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ಮಾಹಿತಿಯ ಪ್ರಕಾರ, ಪ್ರಕಾಶನ ಪತ್ನಿಯೊಂದಿಗೆ ಫಕ್ಕೀರಪ್ಪ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಶಂಕೆಯಿಂದ ಇಬ್ಬರ ನಡುವೆ ಹಲವು ದಿನಗಳಿಂದ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಈ ವಿಚಾರವಾಗಿ ಹಿಂದೆ ರಾಜಿ ಪಂಚಾಯತಿಯೂ ನಡೆದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಆದರೆ ವಿವಾದ ಮತ್ತೆ ಮುಂದುವರೆದ ಹಿನ್ನೆಲೆಯಲ್ಲಿ ಕೋಪಗೊಂಡ ಪ್ರಕಾಶ, ಫಕ್ಕೀರಪ್ಪನ ಮೇಲೆ ಮಾರಣಾಂತಿಕ ದಾಳಿ ನಡೆಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮುರಗೇಶ ಚೆನ್ನಣ್ಣನವರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.
ಈ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Post a Comment